ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಪೆರಿಯಾಟಡ್ಕ ಮುನಿಕ್ಕಲ್ ತಿರುವಿನಲ್ಲಿ ಭೀಕರ ಅಪಘಾತವೊಂದು ಸ್ವಲ್ಪದರಲ್ಲೇ ತಪ್ಪಿದ್ದು, ಕಂಟೈನರ್ ಲಾರಿಯೊಂದು ಅಪಾಯಕಾರಿ ಸ್ಥಿತಿಯಲ್ಲಿ ಪಾರಾಗಿದೆ.

ಸುಮಾರು 10 ಮೀಟರ್ ಎತ್ತರದ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್ ಕಂಟ್ರೋಲ್ ರೂಂ ಸಮೀಪ ಅಪಘಾತಕ್ಕೀಡಾಗಿದೆ.

ಲಾರಿಯ ಹಿಂಭಾಗವು ರಸ್ತೆಯ ತಡೆಗೋಡೆ ಗೆ ಬಲವಾಗಿ ಸಿಲುಕಿಕೊಂಡಿದ್ದರಿಂದ ಕೆಳಗೆ ಉರುಳದೆ ತಡೆದು ನಿಂತಿದೆ. ಒಂದು ವೇಳೆ ತಡೆಗೋಡೆ ಇಲ್ಲದಿದ್ದರೆ ಲಾರಿ ಕೆಳಗಿನ ಸರ್ವೀಸ್ ರಸ್ತೆಗೆ ಮಗುಚಿ ಬಿದ್ದು ದೊಡ್ಡ ಮಟ್ಟದ ಅನಾಹುತ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಅದೃಷ್ಟವಶಾತ್ ಲಾರಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾನೆ.

