ಮಂಜೇಶ್ವರ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಂಜೇಶ್ವರ ತಾಲೂಕು ಪೈವಳಿಕೆ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಾಪಕ ಬೆಳೆ ಹಾನಿ ಸಂಭವಿಸಿದೆ. ಪ್ರದೇಶದ ಪ್ರಮುಖ ರೈತರನ್ನು ಒಳಗೊಂಡಂತೆ ಒಟ್ಟು 19 ಎಕರೆ ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಹಲವು ಎಕರೆಗಳಲ್ಲಿ ಬೆಳೆದಿದ್ದ ಭತ್ತ ಸಂಪೂರ್ಣವಾಗಿ ಜಲಾವೃತವಾಗಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರದೇಶದ ರೈತ ವಿನೋದ್ ಅವರ 15 ಎಕರೆ ಭತ್ತದ ಗದ್ದೆ ಹಾಗೂ ಮೊಹಮ್ಮದ್ ಹಾಜಿ ಮತ್ತು ಕಮಾಲ್ ಹಾಜಿ ಅವರ ತಲಾ 2.5 ಎಕರೆ ಭತ್ತದ ಗದ್ದೆಗಳು ನೀರಿನಿಂದ ಮುಳುಗಿ ಭಾರೀ ಹಾನಿಗೊಳಗಾಗಿವೆ. ವಿನೋದ್ ಅವರ 15 ಎಕರೆ ಬೆಳೆ ನಾಶವಾದ ಪರಿಣಾಮವೇ ಸುಮಾರು ₹4 ಲಕ್ಷ ನಷ್ಟ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.ಇತರ ಇಬ್ಬರು ರೈತರೂ ಸಹ ಗಮನಾರ್ಹ ಆರ್ಥಿಕ ನಷ್ಟ ಅನುಭವಿಸಿದ್ದಾರೆ.

ನಿರಂತರ ಮಳೆಯಿಂದ ಹೊಲಗಳಲ್ಲಿ ನೀರು ನಿಂತುಕೊಂಡಿದ್ದು, ನಾಟಿ ಮಾಡಿದ ಭತ್ತದ ಸಸಿಗಳು ಸಂಪೂರ್ಣವಾಗಿ ಮುಳುಗಿವೆ. ನೀರು ಹೊರಹೋಗಲು ಸಾಧ್ಯವಾಗದ ಕಾರಣ ಬೆಳೆ ಕೊಳೆತು ಹಾಳಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಬ್ಲಾಕ್ ಫಂಡ್ ಬಳಸಿ ನಿರ್ಮಿಸಿದ ಚೆಕ್ ಡ್ಯಾಂ ನೀರು ಹರಿದು ಹೋಗುವುದನ್ನು ತಡೆದು, ಭತ್ತದ ಗದ್ದೆಗಳಿಗೆ ನೀರು ನುಗ್ಗಲು ಕಾರಣವಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಜೊತೆಗೆ, ಮಳೆಗಾಲಕ್ಕೂ ಮುನ್ನ ಪಂಚಾಯತ್ ವತಿಯಿಂದ ಹಳ್ಳ-ತೊರೆಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸದಿರುವುದೂ ನೀರು ನಿಂತುಕೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಬೆಳೆ ಹಾನಿಯನ್ನು ಪರಿಶೀಲಿಸಿ, ಸೂಕ್ತ ಪರಿಹಾರ ಧನ ಮಂಜೂರು ಮಾಡಬೇಕು. ಜೊತೆಗೆ, ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಮಳೆ ಇನ್ನೂ ಮುಂದುವರಿಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳೆ ಹಾನಿಯಾಗುವ ಆತಂಕವೂ ವ್ಯಕ್ತವಾಗಿದೆ.


