ಮಂಜೇಶ್ವರ : ಉಪ್ಪಳದಲ್ಲಿ ಕಡಲ ಆರ್ಭಟ ಮುಂದುವರಿದಿದ್ದು, ಶಿವಾಜಿನಗರದಲ್ಲಿ ಮನೆಗಳು ಸಮುದ್ರಪಾಲಾದ ಬೆನ್ನಲ್ಲೇ, ಮಂಗಲ್ಪಾಡಿ ಪಂಚಾಯತ್ನ ಮುಟ್ಟಂ ಬೇರಿಕೆಯಲ್ಲಿ ಪ್ರಮುಖ ರಸ್ತೆಯೊಂದು ಜಲಾವೃತಗೊಂಡು ಕುಸಿಯುತ್ತಿದೆ.

ಇದರಿಂದ ನೆಬಿನ್, ಇಬ್ರಾಹಿಂ, ಅನಿಲ್ ಹಾಗೂ ಆನಂದ್ ಅವರ ಮನೆಗಳಿಗೆ ಗಂಭೀರ ಅಪಾಯ ಎದುರಾಗಿದೆ.
ಕಳೆದ ಕೆಲವು ದಿನಗಳಿಂದ ಇಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಶಾರದಾನಗರದಲ್ಲಿ ಶಶಿಕಲಾ ಎಂಬವರ ಮನೆ ಈಗಾಗಲೇ ಸಮುದ್ರದ ಪಾಲಾಗಿದೆ.

ಅಪಾಯದಂಚಿನಲ್ಲಿರುವ ಲಲಿತಾ, ನಿವೇದಿತಾ ಮತ್ತು ಗಿರಿಜಾ ಅವರ ಕುಟುಂಬಗಳನ್ನು ಸುರಕ್ಷಿತವಾಗಿ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.
ಕಂಗಾಲಾಗಿರುವ ಸ್ಥಳೀಯರು, ಸಂತ್ರಸ್ತ ಕುಟುಂಬಗಳಿಗೆ ಕೂಡಲೇ ಸೂಕ್ತ ಪರಿಹಾರ ಒದಗಿಸುವಂತೆ ತುರ್ತಾಗಿ ಆಗ್ರಹಿಸಿದ್ದಾರೆ.

