ಮಂಗಳೂರು, ಜೂನ್ 28: ರಂಗಭೂಮಿ ಕಲೆಯು ಸಂಗೀತ, ಭಾಷೆ ಹಾಗೂ ಸಾಹಿತ್ಯ ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾಗಿದ್ದು, ಕಲಾವಿದರಿಗೆ ವಿಪುಲ ಅವಕಾಶಗಳನ್ನು ಒದಗಿಸುತ್ತದೆ. ದೇಶದ ಸಂಸ್ಕೃತಿ ಮತ್ತು ಮೌಲ್ಯಗಳ ಸಂರಕ್ಷಣೆ ಹಾಗೂ ವೃದ್ಧಿಗೆ ನಾಟಕ ಮಾಧ್ಯಮವು ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಸೆಪ್ಟೆಂಬರ್ 6ರಿಂದ 12ರವರೆಗೆ ಕೃಷ್ಣಾಪುರದಲ್ಲಿ ನಡೆಯಲಿರುವ ಅಂತರ್ರಾಜ್ಯ ಮಟ್ಟದ ತುಳು ನಾಟಕ ಸ್ಪರ್ಧಾ ಸಪ್ತಾಹ ‘ಕೃಷ್ಣಾಪುರ ರಂಗಪರ್ವ–2026’ ಕಾರ್ಯಕ್ರಮದ ಲಾಂಛನವನ್ನು ಭಾನುವಾರ ಒಡಿಯೂರು ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.

‘ಕೃಷ್ಣಾಪುರ ರಂಗಪರ್ವ–2026’ ಸಮಾಜದಲ್ಲಿ ಸತ್ ಪರಿವರ್ತನೆಗೆ ಪ್ರೇರಣೆಯಾಗಲಿ. ಸಮಿತಿಯ ವಿವಿಧ ಕಾರ್ಯಚಟುವಟಿಕೆಗಳ ಮೂಲಕ ಅಂತರಂಗ ಮತ್ತು ಬಹಿರಂಗ ಎಂಬ ಎರಡೂ ಮುಖಗಳು ದೇವರಿಗೆ ಸಮರ್ಪಿತವಾಗುವಂತಾಗಲಿ ಎಂದು ಅವರು ಹಾರೈಸಿದರು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ಕಾರ್ಯಕ್ರಮದ ರೂಪರೇಖೆ ಹಾಗೂ ಕಾರ್ಯಯೋಜನೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳಾದ ಅಶೋಕ್ ಕೃಷ್ಣಾಪುರ, ಪಿ. ಸುಧಾಕರ ಕಾಮತ್, ಪಿ. ಉಪೇಂದ್ರ ಆಚಾರ್ಯ, ವಿಠ್ಠಲ ಶೆಟ್ಟಿ, ಲಕ್ಷ್ಮೀ ಶೇಖರ್ ದೇವಾಡಿಗ, ಸುಧಾ ಆಚಾರ್ಯ, ರಾಕೇಶ್ ಕೋಟ್ಯಾನ್, ಸತೀಶ್ ಸಾಲ್ಯಾನ್, ವಿಶ್ವನಾಥ ಬಿ. ಮೂಲ್ಯ, ಸೌಮ್ಯ ಸುಧೀರ್, ರೋಷನ್ ಶೆಟ್ಟಿ, ಕಮಲಾ ನಾಯಕ್, ರೇಣುಕಾ ತಿಲಕ್ ರಾಜ್, ಗಿರೀಶ್ ಕುಲಾಲ್, ಶರತ್ ಬೊಳ್ಳಾಜೆ, ವಿಶ್ವನಾಥ ಆಚಾರ್ಯ, ಗಣೇಶ ಶೆಟ್ಟಿಗಾರ್ ಹಾಗೂ ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು.

