ಕಾಸರಗೋಡು:ಕೇಂದ್ರ ಸರ್ಕಾರದ ರಾಷ್ಟ್ರೀಯ ವಯೋಶ್ರೀ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರು ಹಾಗೂ ದಿವ್ಯಾಂಗರಿಗೆ ಉಚಿತ ಸಹಾಯಕ ಸಾಧನಗಳನ್ನು ವಿತರಿಸುವ ಉದ್ದೇಶದಿಂದ ಸ್ಕ್ರೀನಿಂಗ್ ಶಿಬಿರವನ್ನು ಮಧೂರಿನ ಉಳಿಯತ್ತಡ್ಕದ ಅಟಲ್ಜಿ ಸಮುದಾಯ ಭವನದಲ್ಲಿ ಆಯೋಜಿಸಲಾಯಿತು. ಪ್ರಧಾನಮಂತ್ರಿ ದಿವ್ಯಶ ಕೇಂದ್ರ ಹಾಗೂ ವಿಕಸಿತ ಕೇರಳ ಕಾಸರಗೋಡು ಜಿಲ್ಲಾ ಹೆಲ್ಪ್ ಡೆಸ್ಕ್ನ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಬಿರವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಎಂ.ಎಲ್. ಅಶ್ವಿನಿ, ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ಉಚಿತ ಸಹಾಯಕ ಸಾಧನಗಳನ್ನು ಒದಗಿಸುವ ರಾಷ್ಟ್ರೀಯ ವಯೋಶ್ರೀ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾಳಜಿಗೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಧೂರು ಪೂರ್ವ ವಲಯ ಸಮಿತಿ ಅಧ್ಯಕ್ಷ ಮಹೇಶ್ ಮಧೂರು ವಹಿಸಿದ್ದರು. ದಿವ್ಯಶ ಕೇಂದ್ರದ ಪರವಾಗಿ ಡಾ. ಗೋಕುಲ್, ಅಭಿನವ್, ಆಡಿಯಾಲಜಿಸ್ಟ್ ಡಾ. ಮಧುಶ್ರೀ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಜಿಲ್ಲಾ ಸೆಲ್ ಸಂಯೋಜಕ ಸುಕುಮಾರ್ ಕುದ್ರೆಪ್ಪಾಡಿ, ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜ್ಞಾನಿ ಶಾನ್ಭಾಗ್, ಉಪಾಧ್ಯಕ್ಷ ಭಾನುಪ್ರಕಾಶ್, ಪಂಚಾಯಿತಿ ಜನಪ್ರತಿನಿಧಿಗಳು, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿ ಪ್ರತಿನಿಧಿ ಪ್ರಮೀಲಾ ಮಜಲ್ ಹಾಗೂ ಅನಿಲ್ ಪಕ್ಕಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಷ್ಟ್ರೀಯ ವಯೋಶ್ರೀ ಯೋಜನೆಯ ಸ್ಕ್ರೀನಿಂಗ್ ಶಿಬಿರವು ಜುಲೈ 22ರಂದು ಮುಳ್ಳೇರಿಯ ಶ್ರೀ ಗಣೇಶ್ ಕಲಾಮಂದಿರ, ಜುಲೈ 23ರಂದು ಕುಟ್ಟಿಕ್ಕೋಲ್ ಸೋಪಾನಂ ಆಡಿಟೋರಿಯಂ ಹಾಗೂ ಜುಲೈ 24ರಂದು ಬಳಾಂತೋಡು ಮಿಲ್ಮಾ ಹಾಲ್ನಲ್ಲಿ ನಡೆಯಲಿದೆ.

