ಮಂಜೇಶ್ವರ: ಮಂಜೇಶ್ವರ ಸಿ.ಎಚ್.ಸಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಔಷಧಿಗಳ ಕೊರತೆ ತೀವ್ರವಾಗಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಅಗತ್ಯ ಚಿಕಿತ್ಸಾ ಸೌಲಭ್ಯಗಳು ಒದಗಿಸಬೇಕೆಂದು ಆಗ್ರಹಿಸಿ ಎಸ್ಡಿಪಿಐ ಮಂಜೇಶ್ವರ ಗ್ರಾಮಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಆಸ್ಪತ್ರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.


ಜ್ವರ ಸೇರಿದಂತೆ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ಸೂಕ್ತ ವೈದ್ಯರು ಹಾಗೂ ಔಷಧಿಗಳು ಲಭ್ಯವಿಲ್ಲದಿರುವುದು ಆರೋಗ್ಯದ ದೃಷ್ಟಿಯಿಂದ ಗಂಭೀರ ಸಮಸ್ಯೆ ಉಂಟಾಗುವುದಾಗಿ ಪ್ರತಿಭಟನಾ ನಿರತರು ಆರೋಪಿಸಿದರು.


ಮಂಜೇಶ್ವರ ಉಪನೋಂದಣಿ ಕಚೇರಿ ಪರಿಸರದಿಂದ ಆರಂಭಗೊಂಡ ಮೆರವಣಿಗೆಯನ್ನು ಪೊಲೀಸರು ಆಸ್ಪತ್ರೆ ಪ್ರವೇಶದ್ವಾರದಲ್ಲಿ ತಡೆದರು. ಆಸ್ಪತ್ರೆ ಮುಂಭಾಗದಲ್ಲಿ ನಡೆದ ಧರಣಿಯನ್ನು ಎಸ್ಡಿಪಿಐ ಜಿಲ್ಲಾ ಸಮಿತಿಯ ಸದಸ್ಯ ಅಶ್ರಫ್ ಬಡಾಜೆ ಉದ್ಘಾಟಿಸಿದರು. ಗ್ರಾಮಪಂಚಾಯತ್ ಸಮಿತಿಯ ಅಧ್ಯಕ್ಷ ಸಲಾಂ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು.


ಮಂಡಲ ಅಧ್ಯಕ್ಷ ಶರೀಫ್ ಪಾವೂರು, ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ಹಮೀದ್ ಹೊಸಂಗಡಿ, ಶಬೀರ್ ಪೋಸೋಟ್, ಸುಬೈರ್ ಮಂಜೇಶ್ವರ ಸೇರಿದಂತೆ ಹಲವು ಪ್ರಮುಖರು ವಿವಿಧ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಹಾರಿಸ್ ಉದ್ಯಾವರ ಸ್ವಾಗತಿಸಿ ನಿಯಾಸ್ ಕುಂಜತ್ತೂರು ಧನ್ಯವಾದ ಸಲ್ಲಿಸಿದರು.


