ಕಾಸರಗೋಡು: ಸಾಮಾಜಿಕ ಜಾಲತಾಣದಲ್ಲಿ ಪಾರ್ಟ್ಟೈಮ್ ಕೆಲಸದ ಆಮಿಷವಡ್ಡಿ ಯುವಕನೊಬ್ಬನಿಗೆ 24 ಲಕ್ಷ ರೂ. ಗೂ ಅಧಿಕ ಹಣ ವಂಚಿಸಿ ಲಾಗಿದೆ.
ಅಡೂರು ಪಾಂಡಿ ಕೊಟ್ಟುಂಬಯಲ್ ನಿವಾಸಿ ನೀಡಿರುವ ದೂರಿನ ಮೇರೆಗೆ ಕಾಸರಗೋಡು ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಯು ಸಾಮಾಜಿಕ ಜಾಲತಾಣದ ಮೂಲಕ ದೂರುದಾರರನ್ನು ಸಂಪರ್ಕಿಸಿ, ಆಕರ್ಷಕ ಕಮಿಷನ್ ಸಿಗುವ ಅರೆಕಾಲಿಕ ಉದ್ಯೋಗದ ಭರವಸೆ ನೀಡಿದ್ದನು. ಇದನ್ನು ನಂಬಿದ ಯುವಕ 2025ರ ಆಗಸ್ಟ್ 21ರಿಂದ ಡಿಸೆಂಬರ್ 30ರ ನಡುವೆ ಹಂತ ಹಂತವಾಗಿ ತನ್ನ ಬ್ಯಾಂಕ್ ಖಾತೆಗಳಿಂದ ಒಟ್ಟು 24,72,813 ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾನೆ.

ನಂತರ ವಂಚನೆಗೆ ಒಳಗಾಗಿರುವುದು ಯುವಕನಿಗೆ ತಿಳಿದುಬಂದಿದೆ. ಆರೋಪಿ ಆರಂಭದಲ್ಲಿ ಕೇವಲ 65,000 ರೂ.ಗಳನ್ನು ಮಾತ್ರ ವಾಪಸ್ ನೀಡಿದ್ದು, ಬಾಕಿ ಹಣವನ್ನು ಲಪಟಾಯಿಸಿದ್ದಾನೆ. ಸೈಬರ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

