ರಾಜಕೀಯ ವೈಷಮ್ಯ ಮರೆತ ಓಣಂ ಆಚರಣೆ: ಉರುಳಿತು ಮಡಕೆ, ಗುರಿಯಾಯ್ತು ವಿಪಕ್ಷ ಸದಸ್ಯೆಯ ತಲೆ

ಮಂಜೇಶ್ವರ : ವರ್ಕಾಡಿ ಗ್ರಾಮ ಪಂಚಾಯತ್‌ನಲ್ಲಿ ನಡೆದ ಓಣಂ ಹಬ್ಬದ ಆಚರಣೆಯು ಕೇವಲ ಸಾಂಸ್ಕೃತಿಕ ಸಂಭ್ರಮವಷ್ಟೇ ಅಲ್ಲದೆ, ರಾಜಕೀಯ ಪಕ್ಷಗಳ ನಡುವಿನ ಅಚ್ಚರಿಯ ಸಾಮರಸ್ಯ ಹಾಗೂ ನಗೆಯ ಅಲೆ ಎಬ್ಬಿಸಿದ ತಮಾಷೆಯ ಘಟನೆಗೆ ಸಾಕ್ಷಿಯಾಗಿದೆ.

​ಹಬ್ಬದ ಅಂಗವಾಗಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸಿ ‘ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಹೊಡೆಯುವ ಸ್ಪರ್ಧೆ’ಯನ್ನು ಏರ್ಪಡಿಸಲಾಗಿತ್ತು. ಆಡಳಿತ ಮತ್ತು ವಿರೋಧ ಪಕ್ಷದ ಎನ್ನದೆ ಎಲ್ಲಾ ರಾಜಕೀಯ ಪಕ್ಷಗಳ ಸದಸ್ಯರು ಉತ್ಸಾಹದಿಂದ ಈ ವಿನೋದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

​ಈ ಸಡಗರದ ನಡುವೆ, ಬಿಜೆಪಿ ಸದಸ್ಯೆ ತುಳಸಿ ಕುಮಾರಿ ಅವರು ಕಾಂಗ್ರೆಸ್ ಸದಸ್ಯೆ ಗಾಯತ್ರಿ ಎಂಬಾಕೆಯ ಕಣ್ಣಿಗೆ ಬಟ್ಟೆ ಕಟ್ಟಿ, ಕೋಲು ನೀಡಿ ಮಡಕೆ ಹೊಡೆಯುವಂತೆ ಕಳುಹಿಸಿಕೊಟ್ಟಿದ್ದರು. ಆದರೆ, ಕಣ್ಣಿಗೆ ಬಟ್ಟೆ ಕಟ್ಟಿದ್ದರಿಂದ ದಿಕ್ಕು ತಪ್ಪಿದ ಗಾಯತ್ರಿ, ನೇರವಾಗಿ ಹೋಗಿ ಮಡಕೆ ಒಡೆಯುವ ಬದಲು ಅದರ ಸಮೀಪವೇ ನಿಂತಿದ್ದ ಸಿಪಿಐ ಸದಸ್ಯೆ ಪೂರ್ಣಿಮಾ ಅವರ ತಲೆಗೆ ಗುರಿ ಇಟ್ಟು ಕೋಲಿನಿಂದ ಬಡಿದಿದ್ದಾರೆ.

​ಈ ಅನಿರೀಕ್ಷಿತ ಪ್ರಮಾದದಿಂದ ಸ್ಥಳದಲ್ಲಿ ಕೆಲಕಾಲ ನಗೆಯೋಕುಳಿ ಹರಿಯಿತು. ಸದ್ಯ ಈ ತಮಾಷೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ರಾಜಕೀಯ ಭೇದಭಾವವಿಲ್ಲದೆ ಎಲ್ಲರೂ ಒಟ್ಟಾಗಿ ನಕ್ಕು ನಲಿಯುವಂತೆ ಮಾಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!