ಮಂಜೇಶ್ವರ : ಕುಂಬಳೆ ಕೃಷ್ಣನಗರದಲ್ಲಿರುವ ಕೊಡ್ಯಮ್ಮೆ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಥೋಮಸ್ ಟಿ.ಜೆ. ಅವರ ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.

ಓಣಂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಥೋಮಸ್ ದಂಪತಿ ಆಗಸ್ಟ್ 22ರಂದು ಕಣ್ಣೂರಿನ ತಮ್ಮ ಸ್ವಗೃಹಕ್ಕೆ ತೆರಳಿದ್ದರು. ಸೋಮವಾರ ಮುಂಜಾನೆ ವಾಪಸ್ ಬಂದಾಗ ಮನೆಯ ಮುಂಭಾಗದ ಬಾಗಿಲು ಮುರಿದಿರುವುದು ಮತ್ತು ಕಪಾಟುಗಳು ಚೆಲ್ಲಾಪಿಲ್ಲಿಯಾಗಿರುವುದು ಬೆಳಕಿಗೆ ಬಂದಿದೆ.
ಕಳ್ಳರು ಕೊಠಡಿಯ ಕಪಾಟಿನಲ್ಲಿದ್ದ ಮುಕ್ಕಾಲು ಪವನ್ ಬೆಂಡೋಲೆ ಹಾಗೂ ಅರ್ಧ ಪವನ್ ಉಂಗುರವನ್ನು ಕಳವು ಮಾಡಿದ್ದಾರೆ. ಕಪಾಟಿನಲ್ಲಿದ್ದ ಹಣ ಕಳ್ಳರ ಕಣ್ಣಿಗೆ ಬಾರದೆ ಸುರಕ್ಷಿತವಾಗಿದೆ.

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಕುಂಬಳೆ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

