ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿಯ ಉದ್ಯಾವರ ನಿವಾಸಿಗಳು ಕಳೆದ ಐದು ದಶಕಗಳಿಗೂ ಹೆಚ್ಚು ಕಾಲದಿಂದ ಬಳಸುತ್ತಿರುವ ಪ್ರಮುಖ ರಸ್ತೆ ಸಂಪೂರ್ಣವಾಗಿ ಹಾನಿಗೊಳಗಾಗಿರುವುದನ್ನು ಪ್ರತಿಭಟಿಸಿ, ಉದ್ಯಾವರ ಜನಕೀಯ ವೇದಿಕೆಯ ನೇತೃತ್ವದಲ್ಲಿ ಪಂಚಾಯತಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಸಲಾಯಿತು.


ಪಂಚಾಯತಿ ಆಸ್ತಿಪಟ್ಟಿಯಲ್ಲಿ ಸೇರಿರುವ ಹಾಗೂ ಈ ಹಿಂದೆ ಹಲವು ಬಾರಿ ಪಂಚಾಯತಿ ಅನುದಾನ ಬಳಸಿ ನಿರ್ಮಿಸಲಾಗಿದ್ದ ಈ ರಸ್ತೆ ಕಳೆದ ಕೆಲವು ವರ್ಷಗಳಿಂದ ಸಂಪೂರ್ಣವಾಗಿ ಹಾಳಾಗಿದೆ.
ರಸ್ತೆ ಪುನರ್ನಿರ್ಮಾಣಕ್ಕಾಗಿ ಹಿಂದಿನ ಆಡಳಿತ ಸಮಿತಿಯ ವಾರ್ಡ್ ಸದಸ್ಯರ ಮುತವರ್ಜಿಯಿಂದ ಹಾಗೂ ಶಾಸಕರ ನಿಧಿಯಿಂದ ಅನುದಾನ ಮಂಜೂರಾಗಿತ್ತು.
ಆದರೆ ತಾಂತ್ರಿಕ ಕಾರಣಗಳು ಮತ್ತು ಜಾಗದ ಮೇಲಿನ ಕೆಲವರ ಹಕ್ಕುಸ್ವಾಮ್ಯದ ಕಾನೂನು ತೊಡಕುಗಳನ್ನು ನೆಪವಾಗಿಟ್ಟುಕೊಂಡು ಅಧಿಕಾರಿಗಳು ರಸ್ತೆ ನಿರ್ಮಾಣವನ್ನು ವಿಳಂಬಗೊಳಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗುಂಡಿಬಿದ್ದ ರಸ್ತೆಯಿಂದಾಗಿ ಸೂಕ್ತ ಸಮಯಕ್ಕೆ ವೈದ್ಯಕೀಯ ನೆರವು ಸಿಗದೆ ಈಗಾಗಲೇ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ರಸ್ತೆ ಅಯೋಗ್ಯವಾಗಿರುವುದರಿಂದ ಆಂಬ್ಯುಲೆನ್ಸ್, ಟ್ಯಾಕ್ಸಿ ಹಾಗೂ ಆಟೋರಿಕ್ಷಾಗಳು ಈ ಭಾಗಕ್ಕೆ ಬರಲು ನಿರಾಕರಿಸುತ್ತಿವೆ.

ಇದರಿಂದ ತುರ್ತು ಚಿಕಿತ್ಸೆ ಅಗತ್ಯವಿರುವವರು, ಗರ್ಭಿಣಿಯರು ಹಾಗೂ ಹಿರಿಯ ನಾಗರಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಪ್ರಸಿದ್ಧ ಉದ್ಯಾವರ 1000 ಜುಮಾ ಮಸೀದಿ ಹಾಗೂ ಉದ್ಯಾವರ ಮಾಡ ಅರಸು ಮಂಜಿಷ್ಣಾರ್ ದೇವಸ್ಥಾನಕ್ಕೆ ತೆರಳುವ ಭಕ್ತಾದಿಗಳೂ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.
ಗ್ರಾಮ ಪಂಚಾಯತಿ, ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆಗೆ ಇಳಿದಿದ್ದಾರೆ.
ಕಾನೂನು ಅಡೆತಡೆಗಳನ್ನು ತಕ್ಷಣವೇ ಪರಿಹರಿಸಿ, ಯುದ್ಧೋಪಾದಿಯಲ್ಲಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಪ್ರತಿಭಟನಾ ಧರಣಿ ಎಸ್.ಎಂ. ಬಶೀರ್ ಉದ್ಘಾಟಿಸಿದರು. ಝಕರಿಯಾ ಉದ್ಯಾವರ, ಇಕ್ಬಾಲ್ ಹೊಸಂಗಡಿ, ಹನೀಫ್ ಪೊಸೋಟು, ರಫೀಕ್ ಇರ್ಷಾದ್ ನಗರ, ಫಾತಿಮತ್ ಸೌರಾ, ನಿಜಾಮ್ ಎಂ ಎ ಕೆ, ಆಲಿ ಕುಟ್ಟಿ ನ್ಯಾಷನಲ್ ಮುಂತಾದವರು ಪ್ರತಿಭಟನೆಗೆ ನೇತೃತ್ವ ನೀಡಿದರು.

