ಮಂಜೇಶ್ವರ: ಬೀದಿ ನಾಯಿಗಳ ಹಾವಳಿಗೆ ಬೆದರಿದ ಜನತೆ : ವಿದ್ಯಾರ್ಥಿನಿಗೆ ಗಂಭೀರ ಗಾಯ, ತ್ಯಾಜ್ಯ ಮುಕ್ತಿಗೆ ಆಗ್ರಹ

​ಮಂಜೇಶ್ವರ: ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮನೆಯಿಂದ ಹೊರಬರಲು ಭೀತಿಪಡುವ ವಾತಾವರಣ ನಿರ್ಮಾಣವಾಗಿದೆ.

​ ಇದೀಗ ಉದ್ಯಾವರ ಬಿ.ಎಸ್. ನಗರದಲ್ಲಿ ಟ್ಯೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ ಸ್ಥಳೀಯ ನಿವಾಸಿ ಹನೀಫ್ ಎಂಬುವರ ಪುತ್ರಿ, ವಿದ್ಯಾರ್ಥಿನಿ ಹನಾ ಎಂಬಾಕೆಯನ್ನು ಬೀದಿ ನಾಯಿಯೊಂದು ಹಿಂಬಾಲಿಸಿ ದಾಳಿಗೆತ್ನಿಸಿದೆ. ಈ ವೇಳೆ ಭಯದಿಂದ ಕಿರುಚುತ್ತಾ ಓಡಿದ ಆಕೆ ಆಕಸ್ಮಿಕವಾಗಿ ಬಿದ್ದು, ಕಾಲಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ವಿದ್ಯಾರ್ಥಿನಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

​ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯದಂತೆ ಪಂಚಾಯತ್ ಆಡಳಿತವು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರೂ ಮತ್ತು ದಂಡ ವಿಧಿಸುತ್ತಿದ್ದರೂ, ಕೆಲ ಪರಿಸರವಾಸಿಗಳು ಬಹಿರಂಗವಾಗಿ ತ್ಯಾಜ್ಯ ಉಪೇಕ್ಷಿಸುತ್ತಿದ್ದಾರೆ. ಈ ತ್ಯಾಜ್ಯವೇ ನಾಯಿಗಳು ಗುಂಪುಗೂಡಲು ಮತ್ತು ಜನರ ಮೇಲೆ ಆಕ್ರಮಣ ಮಾಡಲು ಮುಖ್ಯ ಕಾರಣವಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರೂ, ಕೆಲವರು ಮುಖಕ್ಕೆ ಮುಖವಾಡ ಧರಿಸಿ ತ್ಯಾಜ್ಯ ಎಸೆದು ಹೋಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

​​ಬೀದಿ ನಾಯಿಗಳ ನಿಯಂತ್ರಣಕ್ಕೆ ಪಂಚಾಯತ್ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು.
​ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಬೇಕು.
​ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು.

​ಸ್ಥಳೀಯಾಡಳಿತವು ತಕ್ಷಣವೇ ಸ್ಪಂದಿಸಿ ಬೀದಿ ನಾಯಿಗಳ ಭೀತಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಕೂಡಾ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!